Thursday, April 17, 2008

ಐ ಲವ್ ಯೂ ಎನ್ನದವಳು!

ಎದುರು ಮನೆಯವಳಾದರೂ
ನನಗಿಂತ ಎರಡು ಕ್ಲಾಸ್ ದೊಡ್ಡವಳು.
ಒಂದೇ ಸ್ಕೂಲ್‌ಗೆ ಹೋದರೂ
ಮರದ ಕೆಳಗೆ ಮಿಕಿ, ಮಿಕಿ ಮಾತನಾಡಿದವರಲ್ಲ.
ಮಸರೂರು ಮಾರಿ ಜಾತ್ರೆ, ಗಣಪತಿ ಫಂಕ್ಷನ್‌ಗೆ ಹೋದರೂ
ಬಳೆ, ಟೇಪು, ಮಂಡಕ್ಕಿ ಕೇಳಿದವಳಲ್ಲ.
ಹಿಂದೆ ಮುಂದೆ, ಮುಂದೆ ಹಿಂದೆ ಹೋದರೂ
ಐ ಲವ್ ಯೂ ಎನ್ನದವಳು.
ಬರ್ತಡೇಯಂದು ಸಿಹಿ ಕೊಡಲು ಹೋದರೆ
ನನ್ನನ್ನೇ ಮದುವೆಯಾಗು ಎಂದು ಗಂಟು ಬಿದ್ದಳು.


ಬದುಕಿನ ಜಂಜಡ, ಶಿವಮೊಗ್ಗದಿಂದ ಬೆಂಗಳೂರಿಗೆ ವೃತ್ತಿ ಜೀವನದ ಬದಲಾವಣೆ, ಮಹಾನಗರಿಗೆ ಹೊಂದಿಕೊಳ್ಳಬೇಕಾದ ದರ್ದು. ಇವುಗಳೆಲ್ಲವ ಮಧ್ಯೆ ಕೆಲ ದಿನ ಕಾಲಿಯಾಗಿದ್ದೆ. ಇನ್ನಾದರೂ ತುಂಬಿಸುವ ಕೆಲಸ ಮಾಡುತ್ತೇನೆ.

Sunday, September 9, 2007

ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಗುಂಡಿನ ಕಾರುಬಾರು...

ಶೆಟ್ಟಿಹಳ್ಳಿ ಅಭಯಾರಣ್ಯ ಶಿವಮೊಗ್ಗ ಜಿಲ್ಲೆಯ ಸುಮಾರು ೩೯೫ ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಪ್ರದೇಶ. ಇಲ್ಲಿ ಜಿಂಕೆ, ಕಡವೆಗಳು ಯಥೇಚ್ಛವಾಗಿ ಕಂಡು ಬರುತ್ತವೆ.
ಸೂಕ್ಷ್ಮಗ್ರಹಿಗಳಲ್ಲದ ಜಿಂಕೆಗಳು ಮತ್ತು ಕಡವೆಗಳು ಬಂದೂಕಿನ ಗುಂಡಿಗೆ ಇಲ್ಲಿ ದಿನನಿತ್ಯ ಸುಲಭವಾಗಿ ಬಲಿಯಾಗುತ್ತಿವೆ. ಹಗಲೆಲ್ಲಾ ಹೊಲ, ಗದ್ದೆಗಳಲ್ಲಿ ದುಡಿಯುವ ಇಲ್ಲಿನ ಜನರು ರಾತ್ರಿಯಾದ ಕೂಡಲೇ ಬಂದೂಕನ್ನು ಕೈಗೆತ್ತಿ ಕೊಳ್ಳುತ್ತಾರೆ. ಸೂರ್ಯ ದಿಗಂತದಲ್ಲಿ ಮೂಡುವವರೆಗೆ ತಮ್ಮ ಬೇಟೆಯನ್ನು ಮುಂದುವರಿಸಿರುತ್ತಾರೆ. ಇದು ಇಲ್ಲಿಯ ಜನರಿಗೆ ಪ್ರವೃತ್ತಿಯಾಗಿ ಪರಿಣಮಿಸಿದೆ.
ಪ್ರತಿ ಮನೆ ಮನೆಯಲ್ಲಿಯೂ ಅಕ್ರಮ ಬಂದೂಕುಗಳಿಗಿದ್ದು, ಇವಕ್ಕೆ ಅಡುಗೆ ಮನೆಯೇ ಕಾರಸ್ಥಾನ. ಪ್ರತಿ ಮನೆಯ ಓಲೆ ಮೇಲೆ ಬಂದೂಕುಗಳನ್ನು ನೇತು ಹಾಕಲಾಗಿರುತ್ತದೆ. ಈ ಪ್ರದೇಶದ ಜನರು ಮಾಂಸದ ಅಡುಗೆ ಪಾತ್ರೆಗಳನ್ನು ತೊಳೆಯುವುದೇ ಇಲ್ಲ ಎಂದು ಹೊರಗಿನವರು ಆಡಿಕೊಳ್ಳುತ್ತಾರೆ.
ಮಂಡಗದ್ದೆ, ಗಾಜನೂರು, ಸಿರಿಗೆರೆ, ಆಯನೂರು, ಅರಸಾಳುಗಳಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಇದ್ದರು ಸಹ ಬೇಟೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ.
ಬೇಸಿಗೆ ಕಾಲದಲ್ಲಿ ಜಿಂಕೆಗಳು ಹೆಚ್ಚು ಬಲಿ ಬೀಳುತ್ತವೆ. ಕಾಡಿನಲ್ಲಿ ನೀರಿನ ಅಭಾವ ಪರಿಸ್ಥಿತಿ ತಲೆದೊರುವುದರಿಂದ, ಕಾಡಿಗೆ ಬೆಂಕಿ ಹಾಕುವುದರಿಂದ ಪ್ರಾಣಿಗಳು ಮನೆಗಳ ಬಾಗಿಲಿಗೆ ಬರುತ್ತವೆ. ಮನೆಯ ಪಕ್ಕದ ಕೆರೆಗೋ ಅಥವಾ ಮನೆಯ ಹಿಂದಿರುವ ನೀರಿನ ಪಾತ್ರೆಗೋ ಬಂದು ಜಿಂಕೆಗಳು ನೀರು ಕುಡಿಯುವುದು ಇಲ್ಲಿ ಸಾಮಾನ್ಯ.
ಇಲ್ಲಿ ಹಬ್ಬ, ಹರಿದಿನ, ಮದುವೆ- ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಜಿಂಕೆ ಅಥವಾ ಕಡವೆಯ ಬಾಡೂಟ ಖಂಡಿತ. ಈ ಕಾರ್ಯಕ್ರಮಗಳ ಹಿಂದಿನ ರಾತ್ರಿ ತಂಡವೊಂದು ಜಿಂಕೆಗಳನ್ನು ಬೇಟೆಯಾಡುತ್ತದೆ.
ಜಿಂಕೆಗಳನ್ನು ಬೇಟೆಯಾಡಲು ತೆರಳಿದಾಗ ತಮ್ಮ ನಾಯಿಗೆ ಅಥವಾ ಹಿಂಬಾಲಕರಿಗೆ ಗುಂಡಿನ ಏಟು ತಗುಲಿ ಮೃತಪಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ನಾಯಿಗಳ ಸಾವಿಗಂತು ಬೆಲೆಯೇ ಇಲ್ಲ ಎಂಬಂತಾಗಿದೆ ಇಲ್ಲಿ.
ಇದು ಅಭಯಾರಣ್ಯವಾದರೂ ಎಲ್ಲೆಂದರಲ್ಲಿ ಮನೆಗಳು ಕಂಡು ಬರುತ್ತವೆ. ಇಲ್ಲೆಲ್ಲಾ ಒತ್ತುವರಿ ನಡದೇ ಇದೆ. ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಇದೆ ಎಂಬುದು ವಿಶೇಷ ಸಂಗತಿ.
ಈ ಪ್ರದೇಶದಲ್ಲಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬೈಬ್ಯಾಕ್ ಯೋಜನೆ ತರಲು ಅರಣ್ಯ ಇಲಾಖೆ ಯೋಚಿಸಿದಾಗ ಜನತೆ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದರು.
ಈ ಪ್ರದೇಶದ ಸ್ವಚ್ಛಂದ ಹಾರಾಟಕ್ಕೆ ಅಡ್ಡಿಯಾಗುತ್ತಿರುವ ಒಂದೇ ಒಂದು ಕಾಡಾನೆ ಎತ್ತಂಗಡಿಗೆ ಈಗ ಹೋರಾಟ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಈ ಅಭಯಾರಣ್ಯದ ವ್ಯಾಪ್ತಿಯಿಂದ ಜಿಂಕೆಗಳು ಮತ್ತು ಕಡೆವೆಗಳು ಕಣ್ಮರೆಯಾಗುವ ಮೊದಲೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಅಕ್ರಮ ಬಂದೂಕುಗಳಿಗೆ ಕಡಿವಾಣ ಹಾಕಿ ಸಂರಕ್ಷಣೆಗೆ ಮುಂದಾಗುವುದು ಅಗತ್ಯ.

Saturday, August 11, 2007

ವಾಹ್ಹ್ ಲಿಂಗಮನಕ್ಕಿ ಮತ್ತು ಭದ್ರತೆ

ವೇಣು ಸಾರ್, ರಾಜೇಶ್‌ನಾಯ್ಕರು ಈಗಾಗಲೇ ಜೋಗ, ಅಲ್ಲಿನ ವಿವಿಧ ಮಜಲುಗಳ ಬಗ್ಗೆ ಬರೆದಿದ್ದಾರೆ. ಆದರೂ ನಾನೊಮ್ಮೆ ಅದೇ ಜೋಗದ ಬಗ್ಗೆ ಬರೆಯುತ್ತಿದ್ದೇನೆ. ಅವತ್ತು (ಆ.೭) ನಾವು ಜೋಗಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದೇ ರಾತ್ರಿ ೧೦.೩೦ಕ್ಕೆ. ಕೆಲಸ ಮುಗಿಸಿ ಮನೆ ಸೇರಬೇಕಾದರೆ ಬೆಳಗಿನಜಾವ ಮೂರು ಗಂಟೆ. ಪೂರ್ವ ನಿರ್ಧಾರದಂತೆ ಸಹದ್ಯೋಗಿಗಳ ಒಂದು ತಂಡ ಬೆಳಗ್ಗೆ ೬.೩೦ಕ್ಕೆ ಶಿವಮೊಗ್ಗದಿಂದ ಜೋಗಕ್ಕೆ ಹೊರಟರೆ, ಮಕ್ಕಳು, ಮಹಿಳೆಯರಿದ್ದ ನಾವು ಹೊರಟಿದ್ದು ೮.೩೦ಕ್ಕೆ. ಜೋಗಕ್ಕೆ ಹೋಗುವ ದಾರಿಯಲ್ಲಿ ರಾತ್ರಿಯಿಡಿ ನಾವು ಮಾಡಿದ ಸುದ್ದಿಯ ಅಶ್ಲೇಷಾ ಮಳೆ ಮಾಡಿದ ಅನಾಹುತದ ಚಿತ್ರಣ ಕಣ್ಣಿಗೆ ಕಟ್ಟಿದಂತಿತ್ತು. ರಸ್ತೆಗಳು, ಸೇತುವೆ, ಮೋರಿಗಳ ಮೇಲೆ ನೀರು ಹರಿಯುತ್ತಿತ್ತು. ಭತ್ತದ ಗದ್ದೆಗಳು ಸಮುದ್ರದಂತೆ ಕಾಣುತ್ತಿದ್ದವು.
ನಾವು ಜೋಗವನ್ನು ತಲುಪುದರೊಳಗೆ ಮುಂದೆ ಹೋದ ಗೆಳೆಯರು ಕೆಪಿಸಿ ಮುಖ್ಯಕಚೇರಿ ಬಳಿ ನಮಗಾಗಿ ಲಿಂಗಮನಕ್ಕಿ ನೋಡ ಹೋಗಲು ಕಾಯುತ್ತಿದ್ದರು. ನಾವು ಹೋಗುತ್ತಿದ್ದಂತೆ ವಾಹನ ಸಂಖ್ಯೆ, ನಮ್ಮ ವಿವರ ಎಲ್ಲ ಬರೆದು ಅಧಿಕಾರಿಗಳಿಗೆ ಕೊಟ್ಟು ಪಾಸ್ ಪಡೆದುಕೊಳ್ಳಲಾಯಿತು. ನಮ್ಮಗೆ ಸಂಬಂಧಿಸಿದ ಅಧಿಕಾರಿ ಅಲ್ಲೊಬ್ಬರು ಇರುವುದರಿಂದ ಲಿಂಗನಮಕ್ಕಿ ಅಣೆಕಟ್ಟಿಗೆ ಹೋಗಲು ಪಾಸ್ ಪಡೆದುಕೊಳ್ಳಲು ಹೆಚ್ಚು ಸಮಸ್ಯೆ ಆಗಲಿಲ್ಲ. ಆದರೂ ಮಕ್ಕಳಿಗೆ ಬಿಡುವುದಿಲ್ಲ ಎಂಬ ಕಂಡಿಷನ್ ಹಾಕಲಾಯಿತು. ಈಗ ಲಿಂಗನಮಕ್ಕಿ ಅಣೆಕಟ್ಟಿಗೆ ಉಗ್ರರು, ನಕ್ಸಲರು ಬೆದರಿಕೆ ಇರುವುದರಿಂದ ಅಲ್ಲಿ ಯಾರಿಗೂ ಬಿಡುವುದಿಲ್ಲ. ಕೆಪಿಸಿ ಅಧಿಕಾರಿಗಳಿಗೂ ಸಹ. ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಿಸಿರುವ ನಾಗವಳ್ಳಿ ಪಕ್ಕದಲ್ಲಿಯೇ ಇರುವುದರಿಂದ ಕಟ್ಟುನಿಟ್ಟಿನ ಭದ್ರತೆ ಅಲ್ಲಿದೆ. ಇತ್ತೀಚೆಗಷ್ಟೆ ತರಬೇತಿ ವಿದ್ಯಾರ್ಥಿಗಳಿಗೂ ಸಹ ಅಣೆಕಟ್ಟು ಪ್ರದೇಶ ಪ್ರವೇಶ ನಿಷೇಧಿಸಲಾಗಿದೆ. ಅಲ್ಲಿನ ಅಂತರಿಕ ಅಧಿಕಾರಿಗಳು ಅಣೆಕಟ್ಟು ಪ್ರದೇಶಕ್ಕೆ ಪ್ರವೇಶ ಪಾಸ್ ಪಡೆದವರ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ನಮ್ಮೊಂದಿಗೆ ಅಧಿಕಾರಿಯೊಬ್ಬರು ಅಲ್ಲಿನ ಮಾಹಿತಿ ನೀಡಲು ಬಂದಿದ್ದರು. ಮುಖ್ಯಗೇಟ್ ಬಳಿ ಹೋಗುತ್ತಿದ್ದಂತೆಯೇ ಭದ್ರತೆಯವರು ಕೈ ಮಾಡಿ ಹಿಂದೆ ಹೋಗುವಂತೆ ಸೂಚಿಸಿದರು. ನಮ್ಮ ಜೊತೆ ಇದ್ದ ಅಧಿಕಾರಿ ತನಿಖಾ ಠಾಣೆಗೆ ಹೋಗಿ ಅಲ್ಲಿನವರಿಗೆ ಮನವರಿಕೆ ಮಾಡಿಕೊಟ್ಟು ಅಂತೂ ಮೊದಲ ಹಂತದಲ್ಲಿ ಪ್ರವೇಶ ಪಡೆದವು. ನಂತರ ಹಂತ ಹಂತಕ್ಕೂ ತಪಾಸಣೆ ನಮಗೆ ಎದುರಾಯಿತು. ಪ್ರತಿ ಬಾರಿಯೂ ಅಲ್ಲಿನ ಅಧಿಕಾರಿಗಳಿಗೆ ನಮ್ಮ ಬಗ್ಗೆ ಮನವರಿಗೆ ಮಾಡಿಕೊಡುವುದು ನಮ್ಮ ಜತೆ ಬಂದ ಕೆಪಿಸಿ ಅಧಿಕಾರಿಗೆ ಸಾಕುಬೇಕಾಯಿತು. ಅಂತೂ ಲಿಂಗನಮಕ್ಕಿ ಅಣೆಕಟ್ಟೆ ಮೇಲೆ ನಿಂತಾಗ ಎಲ್ಲರಿಗೂ ಪರಮಾನಂದ. ನಮ್ಮ ಜೀವನ ಸಾರ್ಥಕವಾಯಿತು ಎಂಬ ಖುಷಿ. ಆ.೮ ಬುಧವಾರ ಅಣೆಕಟ್ಟೆಯಲ್ಲಿರುವ ೧೧ ಗೇಟ್‌ಗಳನ್ನು ತೆಗೆದು ಸುಮಾರು ೧ ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. ನಮ್ಮ ತಮಿಳುನಾಡು, ಆಂಧ್ರಪ್ರದೇಶದ ಸಹದ್ಯೋಗಿಗಳ ಖುಷಿಗಂತೂ ಪಾರವೇ ಇರಲಿಲ್ಲ. ಅಣೆಕಟ್ಟೆಯ ಕೆಳಗೆ ಬಂದಾಗಲಂತೂ ಎಂದೂ ನೋಡಲು ಸಾಧ್ಯವಾಗದ ದೃಶ್ಯ ಎಲ್ಲರ ಮನಸೂರೆಗೊಂಡಿತು. ನಾನು ನೂರಾರು ಸಾರಿ ಜೋಗಕ್ಕೆ ಬಂದಿದ್ದೇನೆ. ಈಗ ನನ್ನ ಜನ್ಮ ಸಾರ್ಥಕವಾಯಿತು ಎಂದು ನಮ್ಮ ಡ್ರೈವರ್ ಸಂದೇಶ್ ಹೇಳಿದ್ದರಲ್ಲಿ ಸತ್ಯವಿತ್ತು.

ಅಣೆಕಟ್ಟೆಯಿಂದ ಹಾಲ್ನೊರೆಯಂತೆ ಅಳಾಳೆತ್ತರಕ್ಕೆ ಧುಮುಕುತ್ತಿದ್ದ ಶರಾವತಿಯಲ್ಲಿ ಎಲ್ಲರೂ ಮಿಂದು ಹೋದರು. ಜತೆಗೆ ಮಳೆ ಸುರಿಯುತ್ತಿದ್ದರೂ ಯಾರಿಗೂ ಲೆಕ್ಕವಿರಲಿಲ್ಲ. ಆ ನಂತರ ವಿದ್ಯುದಾಗಾರಕ್ಕೆ ಹೋಗಬೇಕು ಎಂಬ ನಮ್ಮ ಆಸೆ ಸ್ವಲ್ಪ ಸಮಸ್ಯೆ ಇದ್ದ ಕಾರಣ ಕೈಗೂಡಲಿಲ್ಲ. ಪಾಸ್‌ನಲ್ಲಿ ಮಾತ್ರ ಅಲ್ಲಿಗೆ ಹೋಗಲು ಅವಕಾಶವಿತ್ತು. ನಂತರ ಚೈನಾ ಬ್ರಿಡ್ಜ್‌ಗೆ ಹೋದಾಗ ಅಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಅಲ್ಲಿಯೂ ಕುಣಿದು, ಮನಸಾರೆ ಖುಷಿಪಟ್ಟೆವೂ. ನಂತರ ಜೋಗಕ್ಕೆ ಬಂದಾಗ ಅಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಯಾರೂ ಇರಲಿಲ್ಲ. ಎಲ್ಲರೂ ಒಂದಾಗಿದ್ದರು. ಫಾಲ್ಸ್ ಐಬಿಯಲ್ಲಿ ಮೊದಲ ತಂಡಕ್ಕೆ ಊಟ ಸಿಕ್ಕಿತು. ನಾವು ಸಾಗರದಲ್ಲಿ ಬಂದು ಊಟ ಮಾಡಿ ಶಿವಮೊಗ್ಗಕ್ಕೆ ಬಂದಾಗ ಸಂಜೆ ೪.೩೦. ಮತ್ತೆ ಎಂದಿನಂತೆ ರಾತ್ರಿ ಕೆಲಸಕ್ಕೆ.
ಮೊದಲ ಚಿತ್ರ: ಸುಜಾತ ಮತ್ತು ಚುಕ್ಕಿ.
ಎರಡನೇ ಚಿತ್ರ: ಚೈನಾ ಗೇಟ್‌ನಲ್ಲಿ ಸಹದ್ಯೋಗಿಗಳು.
ಮೂರನೇ ಚಿತ್ರ: ಹೊನ್ನಾಳಿ ಚಂದ್ರಶೇಖರ್, ಅವರ ಪತ್ನಿ, ಸೂರ್ಯ, ಚುಕ್ಕಿ, ಸಂದೇಶ್, ಭೂಮಿಕಾ.
ಚಿತ್ರಕೊಟ್ಟಿದ್ದು: ಎಂ. ರಾಘವೇಂದ್ರ. www.raaghava-haagesummane.blogspot.com

Saturday, August 4, 2007

ಸಿಟಿ ಬಸ್ ಮತ್ತು ಕಾಮನ್‌ಸೆನ್ಸ್...

ನಮ್ಮವರಿಗೆ ಕಾಮನ್‌ಸೆನ್ಸ್ ಇಲ್ಲಾರಿ... ಇದು ಆಗಾಗ ನಮಗೆ ಎದುರಾಗುವ ಮಾತು.
ಇದು ಬಹಳಷ್ಟು ಸಾರಿ ಸತ್ಯ ಎನಿಸುವುದು ಸಿಟಿ ಬಸ್‌ಗಳಲ್ಲಿ. ಅದು ಖಾಸಗಿ ಸಿಟಿ ಬಸ್‌ಗಳಲ್ಲಿ. ಅದ್ಯಾಕೋ ನಮ್ಮವರು ಈ ಸಿಟಿ ಬಸ್ ಕಂಡೊಡನೆ ಕಾಮನ್‌ಸೆನ್ಸ್ ಮರೆತು ಬಿಡುತ್ತಾರೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಬಿಎಂಟಿಸಿ ಬಸ್ ಹಾವಳಿಯಾದರೆ ನಮ್ಮ ಶಿವಮೊಗ್ಗದಂತಹ ಕೇಂದ್ರಗಳಲ್ಲಿ ಖಾಸಗಿ ಸಿಟಿ ಬಸ್‌ಗಳದ್ದೇ ದರ್ಬಾರು. ಇಲ್ಲಿ ಬಸ್ ಹತ್ತುವವರಿಂದ ಹಿಡಿದು ಬಸ್ ಓಡಿಸುವವರು, ಕ್ಲೀನರ್, ಎಜೆಂಟೂ, ಬಸ್ ಕಳುಹಿಸಲಿಕ್ಕೆ ಬರುವವರು ಎಲ್ಲಾರು ಒಂದು ಥರಾ ಆಡ್ತಾರೆ.
ಸಿಟಿ ಬಸ್ ಆಗಲೇ ಸ್ಟ್ಯಾಂಡ್ ಬಿಟ್ಟು ಹೊರಟಿರುತ್ತೇ. ಹಿಂದಿನಿಂದ ಮಹಿಳೆಯೊಬ್ಬರು ಓಡಿ ಬರ್‍ತಾ ಇರ್‍ತಾರೆ. ಡ್ರೈವರ್ ಸ್ವಲ್ಪ ಸ್ಲೋ ಮಾಡ್ತಾನೆ. ಎಜೆಂಟ್ರು ಹಿಂದಿನ ಡೋರ್‌ನಲ್ಲಿ ನಿಂತು ಇಲ್ಲೇ ಹತ್ತಮ್ಮ ಅಂತ ಕೂಗ್ತಾ ಇರ್‍ತಾನೆ. ಆದರೂ ಆಕೆ ಅಲ್ಲಿ ಹತ್ತಲ್ಲ. ಮುಂದಿನ ಡೋರ್‌ನಲ್ಲಿಯೇ ಹತ್ತುತಾಳೆ.
ನಮ್ಮ ಸಿಟಿ ಬಸ್‌ಗಳಲ್ಲೆಲ್ಲಾ ಮುಂದೆ ಮಹಿಳೆಯರು, ಹಿಂದೆ ಪುರುಷರು ಅಂತ ಬೋರ್ಡ್ ಹಾಕಿತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಹಿಂದಿನ ಡೋರ್‌ನಲ್ಲಿ ಹತ್ತಿದರೆ ಅವರ ಗಂಟು ಏನಾದರೂ ಖರ್ಚಾಗುತ್ತಾ? ಇಲ್ಲ. ಅದಕ್ಕೆ ಹೇಳಿದ್ದು ಸಿಟಿ ಬಸ್ ಕಂಡೊಡನೆ ಕಾಮನ್‌ಸೆನ್ಸ್ ಮರಿತಾರೆ ಅಂತ.
ಇನ್ನೂ ಕೆಲವರು ಇರುತ್ತಾರೆ. ಅವರು ಎಷ್ಟೇ ದೂರದಿಂದ ನಿಂತರಲಿ. ಪುರುಷರ ಪಕ್ಕದ ಸೀಟಿನಲ್ಲಿ ಮಾತ್ರ ಕೂರುವುದಿಲ್ಲ. ನಮ್ಮ ಹುಡುಗುರು ಇರ್‍ತಾರಲ್ಲ ಅವರು ಹೆಣ್ಣು ಮಕ್ಕಳ ಪಕ್ಕ ಸೀಟು ಖಾಲಿ ಆಗುವುದನ್ನೇ ಕಾಯ್ತಿರುತ್ತಾರೆ. ಹಂಗೆ ಪುಸುಕ್ಕ ಅಂತ ಕೂತು ಬಿಡುತ್ತಾರೆ.
ಇನ್ನೊಂದು ತರಹದ ಹುಡುಗಿಯವರು ಇರ್‍ತಾರೆ. ಅವರಿಗೆ ಒಬ್ನೆ ಒಂದು ಸೀಟಲ್ಲಿ ಕುಳಿತುಕೊಂಡವನನ್ನು ಕಂಡರೆ ಇಷ್ಟ. ಪ್ಲೀಸ್ ಹಿಂದಿನ ಸೀಟಲ್ಲಿ ಕೂರ್‍ತಿರಾ? ಅಂತಾರೆ. ಅವನು ಎದ್ದು ಆ ಸೀಟಲ್ಲಿ ಕೂರುವುದರ ಒಳಗೆ ಬೇರೆಯವರು ಅದಕ್ಕೆ ಬಂದು ಕೂತಿರುತ್ತಾರೆ. ಸೀಟು ಇಸ್ಕೊಂಡವರು ಇವನ ಕಡೆ ತಿರುಗಿ ಸಹ ನೋಡಲ್ಲ. ಯಾಕಂದ್ರೆ ಅವನು ಎಲ್ಲಾದರೂ ಸೀಟು ಕೇಳಿ ಬಿಟ್ರೆ.
ಇನೂ? ಕೆಲವರು ಇರ್‍ತಾರೆ. ಅವರು ಇಳಿಬೇಕಾಗಿದ್ದು ಬಿಟ್ಟು ಮುಂದಿನ ಸ್ಟಾಪಿಗೆ ಬಸ್ ಹೋಗಲಿ ಅವರು ಮಾತನಾಡುವುದನ್ನು ಮಾತ್ರ ನಿಲ್ಸಲ.
ಸಿಟಿ ಬಸ್ ಕೆಲ ಡ್ರೈವರ್‌ಗಳಿಗೆ ಒಂದು ಖಾಯಾಲಿ ಇರುತ್ತದೆ. ಅವರು ಯಾರೇ ಮುಂದಿನ ಸೀಟಲ್ಲಿ ಕೂತರೂ ಅವರನ್ನು ಮಾತನಾಡಿಸದೇ ಇರುವುದಿಲ್ಲ. ಇಲ್ಲ ಅಂದರೆ ಮೈಕ್ ರೀತಿ ಟೇಪ್ ರೇಕಾರ್ಡರ್ ಆದ್ರೂ ಹಾಕ್ತಾರೆ. ಕ್ಲೀನರ್ ಅನ್ನೋ ಪುಣ್ಯಾತ್ಮಂಗೆ ಮಾತ್ರ ಮುಂದಿನ ಡೋರೇ ಕಾರಾಸ್ಥಾನ.
ಕೆಲ ಹುಡುಗುರು ಇರ್‍ತಾರೆ. ಮಹಿಳೆಯರಿಗೆ ಮೀಸಲು ಅನ್ನೋ ಸೀಟಲ್ಲಿ ಕೂತರೆ ಮಾತ್ರ ನಿದ್ದೆ ಬರೋದು. ಮತ್ತೊಂದಿಷ್ಟು ಜನಕ್ಕೆ ಬಸ್ ಹತ್ತಿದ ಮೇಲೆ ಮೊಬೈಲ್ ರಿಂಗ್‌ಟೋನ್ ಪ್ಲೇ ಮಾಡಿದ್ರೆನೇ ಅವರಿಗೆ ಸಮಾಧಾನ.
ಇನ್ನೊಂದಿಷ್ಟು ಜನ ವಯಸ್ಕರು ಸ್ಟಾಪ್ ಅಲ್ಲದೇ ಇರುವ ಸ್ಥಳದಲ್ಲಿ ನಿಂತು ಬಸ್ಸಿಗೆ ಕೈ ಅಡ್ಡ ಹಾಕ್ತಾರೆ. ‘ಓ ಇದು ಅಲ್ಲಿಗೆ ಹೋಗಲ್ಲ. ಹಂಗಾದರೆ ಅಲ್ಲಿಗೆ ಹೋಗೋ ಬಸ್ ಎಷ್ಟೋತ್ತಿಗೆ ಬರುತ್ತೆ?’ ಅಂತೆಲ್ಲಾ ವಿಚಾರಿಸ್ತಾರೆ.
ನಾನು ಇದುವರೆಗೂ ನೋಡಿರೋ ಸಿಟಿ ಬಸ್ ಪ್ರಯಾಣಿಕರು ಮಾಡೋ ಒಂದೇ ಒಂದು ಒಳ್ಳೆ ಕೆಲಸ- ಯಾರಾದರೂ ಮಹಿಳೆಯರು ಕಂಕುಳಲ್ಲಿ ಮಗು ಎತ್ತಿಕೊಂಡು ಬಂದ್ರೂ ಅಂದ ತಕ್ಷಣ ಸೀಟು ಖಾಲಿ ಇದ್ದರೂ ಪರವಾಗಿಲ್ಲ ಇವರು ಕುಳಿತುಕೊಂಡ ಜಾಗ ಬಿಟ್ಟು ಕೊಡುತ್ತಾರೆ.

Thursday, July 12, 2007

ನಿರ್ದಯಿಗಳು....ತಬ್ಬಲಿ ಮಗುವೂ....

ಈ ಚಿತ್ರವನ್ನೊಮ್ಮೆ ದಿಟ್ಟಿಸಿ ನೋಡಿ. ಕರುಳು ಚುರುಕ್ ಎನ್ನುತ್ತದೆ ಅಲ್ವಾ?.
ಈ ಮಗುವೀಗ ತಬ್ಬಲಿ. ಆತನ ಪಾಲಿಗೆ ಪ್ರೀತಿ ತೋರಬೇಕಾದ, ಕೈ ತುತ್ತು ನೀಡಬೇಕಾದ ಅಪ್ಪ- ಅಮ್ಮ ಯಾರು ಇಲ್ಲ.
ಈ ಮಗು ಮೊನ್ನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಗಿರಿಜನ ರಾಮೇಗೌಡ್ಲು ಮತ್ತು ಕಾವೇರಮ್ಮ ದಂಪತಿ ಎರಡನೇ ಪುತ್ರ ಆದರ್ಶ.
ಆ ಕಡೆ ಪೊಲೀಸರು ಮಹಾನ್ ಸಾಧನೆಯಲ್ಲಿ ಬೀಗುತ್ತಿರುವಾಗಲೇ ಈ ಕಡೆ ಮಗುವೊಂದು ತಬ್ಬಲಿಯಾಯಿತು. ಈತನ ಇದ್ದೊಬ್ಬ ಅಣ್ಣ ಎನ್‌ಕೌಂಟರ್ ಸಂದರ್ಭದಲ್ಲಿ ಎಲ್ಲಿ ಹೋದ ಎಂಬುದು ಇದುವರೆಗೂ ತಿಳಿದಿಲ್ಲ.
ನಾಲ್ವರು ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಪರವಾಗಿಲ್ಲ ಒಬ್ಬ ನಿರಾಪರಾಧಿಗೆ ಶಿಕ್ಷೆಯಾಗಬಾರದು ಎಂಬ ಸಂವಿಧಾನದ ಮೂಲ ಆಶಯವನ್ನೇ ಈ ಘಟನೆ ಅಣುಕಿಸುವಂತಿತ್ತು.
ಏನು ಅರಿಯದ ಈ ಕೂಸು ಚಿಕ್ಕಮಗಳೂರು ಜಿಲ್ಲೆಯ ತನಿಕೋಡಿನ ಅಜ್ಜನ ಮನೆಯಲ್ಲಿದ್ದು ಓದುತ್ತಿದೆ. ಅಪ್ಪ- ಅಮ್ಮನನ್ನು ಪೊಲೀಸರು ಸಾಯಿಸಿದ್ದು ತಿಳಿಯುತ್ತಲೇ ‘ನನ್ನನ್ನು ಬಚ್ಚಿಡಿ, ನನ್ನನ್ನು ಸಾಯಿಸುತ್ತಾರೆ’ ಎಂದು ಗೋಗರೆಯುತ್ತಿತ್ತಂತೆ.
ಎಸ್ಪಿ ವಿಫುಲ್‌ಕುಮಾರ್ ಈತನ ವಿದ್ಯಾಭ್ಯಾಸಕ್ಕೆ ಇಲಾಖೆಯಿಂದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಎಲ್ಲಿಯ ಅಪ್ಪ- ಅಮ್ಮ, ಎಲ್ಲಿಯ ಆರ್ಥಿಕ ನೆರವು.!
ನಕ್ಸಲರು- ಪೊಲೀಸರ ಜಿದ್ದಾಜಿದ್ದಿಗೆ ಇನ್ನೂ ಎಷ್ಟು ಮಕ್ಕಳು ಈ ರೀತಿ ತಬ್ಬಲಿಗಳಾಗಬೇಕೋ?.
ಅನಾಥ ಮಗುವಾದೇ ಅಪ್ಪನೂ, ಅಮ್ಮನೂ ಇಲ್ಲ....

ಮಂಗಳವಾರ ನಡೆದ ಎನ್‌ಕೌಂಟರ್ ಬಗ್ಗೆ ನನಗೇನು ಬೇಜಾರು ಆಗಿರಲಿಲ್ಲ. ಶಸ್ತ್ರ ಹೆಗಲ ಮೇಲೆ ಹೊತ್ತು ತಿರುಗುವವರು ಎಂದಿದ್ದರೂ ಸಮಾಜಘಾತಕರು. ಆದರೆ, ಬುಧವಾರ ಈ ತಬ್ಬಲಿ ಚಿತ್ರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು.

Friday, June 22, 2007

ಕಾಡಿನಿಂದ ದೂರವಾಗುತ್ತಿರುವ ಸಿಂಗಳಿಕಗಳು...

ಸಿಂಹ ಕೇಸರದ ದೈತ್ಯ ಗಾತ್ರದ ಮಂಗಗಳು ನಾಲ್ಕಾರು ಮಾರು ದೂರದ ಮರಕ್ಕೆ ಜಿಗಿಯುವುದನ್ನು ನೀವು ಡಿಸ್ಕವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್‌ಗಳಲ್ಲಿ ವೀಕ್ಷಿಸಿರಬಹುದು.
ಇಲ್ಲವೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಥವಾ ವಿಶ್ವವಿಖ್ಯಾತ ಜೋಗ್‌ಫಾಲ್ಸ್‌ನ ಅಕ್ಕಪಕ್ಕ ಮಿಂಚಿನಂತೆ ಕಂಡು ಕಾಣದಾಗುವ ಈ ರೀತಿಯ ಪ್ರಾಣಿ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಅಥವಾ ಮೈಸೂರು ಮೃಗಾಲಯದಲ್ಲಿ ಮನುಷ್ಯರನ್ನು ಕಂಡೊಡನೆ ಮಾರು ದೂರು ಹೋಗುವ ಈ ಮಂಗವನ್ನು ನೋಡಿರಬಹುದು.
ಇವು ಸಿಂಗಳಿಕಗಳು ಅರ್ಥಾತ್ ಸಿಂಹ ಮುಖದ ಮಂಗಗಳು (LION TAILED MACAQUE). ಇವು ಜಗತ್ತಿನ ಅತ್ಯಂತ ಹಳೆಯ ಮಂಗಗಳು ಎಂದು ಹೆಸರು ಪಡೆದಿವೆ.
ಈ ಸಿಂಗಳಿಕಗಳು ಇಂದು ಕಾಡಿನಿಂದ ದೂರವಾಗುತ್ತಿವೆ. ಒಂದು ಕಾಲದಲ್ಲಿ ಹಿಂಡು ಹಿಂಡಾಗಿ ವಾಸಿಸುತ್ತಿದ್ದ ಇವುಗಳು ಈಗ ಒಂದು ತಪ್ಪಿದರೆ ಇನ್ನೊಂದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವ ಇವುಗಳನ್ನು ಇಂದು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಎಂಬ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕಾರಣನಾಗಿದ್ದಾನೆ.
ಸಿಂಗಳಿಕಗಳು ಭಾರತದಲ್ಲಿ ಪಶ್ಚಿಮಘಟ್ಟ ಪ್ರದೇಶ ಹಾಗೂ ದಕ್ಷಿಣ ಭಾರತದ ದಟ್ಟ ಕಾಡುಗಳಲ್ಲಿ ವಾಸಿಸುತ್ತವೆ. ಕರ್ನಾಟಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಶರಾವತಿ ಕಣಿವೆ ಇವುಗಳ ಪ್ರಮುಖ ಆವಾಸ ಸ್ಥಾನಗಳು.
ಒಂದು ಗುಂಪು ಸಿಂಗಳಿಕ ವಾಸಿಸಲು ಸುಮಾರು ೨೫೦ ಹೆಕ್ಟೇರ್ ಪ್ರದೇಶ ಬೇಕಾಗುತ್ತದೆ. ಆದರೆ, ಭಾರತದಲ್ಲಿ ಈಗ ಉಳಿದಿರುವುದು ಸಿಂಗಳಿಕಗಳ ಮೂಲ ಆವಾಸಸ್ಥಾನ ಶೇ. ೧ ರಷ್ಟು ಮಾತ್ರ. ವ್ಯವಸಾಯ, ಟಿಂಬರ್‌ಗಳಿಗಾಗಿ, ಅಭಿವೃದ್ಧಿಗಾಗಿ ಅರಣ್ಯ ನಾಶ ಯಥೇಚ್ಛವಾಗಿ ಸಾಗಿದ್ದು ಸಿಂಗಳಿಕಗಳ ವಂಶಾಭಿವೃದ್ಧಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ.
ಇದಲ್ಲದೇ ಚೀನಾದಲ್ಲಿ ಸಿಂಗಳಿಕಗಳನ್ನು ಉಪಯೋಗಿಸಿ ತಯಾರಿಸುವ ಔಷಧ ಪದ್ಧತಿ ಬಹು ಜನಪ್ರಿಯವಾಗಿದ್ದು ಕಳ್ಳ ಮಾರ್ಗದ ಮೂಲಕ ಇವುಗಳ ರವಾನೆ ನಡೆಯುತ್ತಿದೆ. ಬೆಳೆಗಳನ್ನು ನಾಶ ಮಾಡುತ್ತವೆ ಎಂಬ ಕಾರಣಕ್ಕೆ ಲಂಗೂರ್‌ಗಳ ಜತೆಗೆ ಇವುಗಳ ಬೇಟೆ ಸಹ ನಡೆಯುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಸಿಂಗಳಿಕಗಳು ದಿನೇ- ದಿನೇ ಪ್ರಾಣಿ ಜಗತ್ತಿನಿಂದ ಕಣ್ಮರೆಯಾಗುವ ಹಾದಿಯಲ್ಲಿ ಸಾಗಿವೆ.
ಐಯುಸಿಎನ್ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಇವುಗಳ ಸಂಖ್ಯೆ ಸದ್ಯ ೨೫೦೦ರ ಆಸುಪಾಸಿನಲ್ಲಿರುವುದು ಕಂಡು ಬಂದಿದೆ.
ತಮಿಳಿನಲ್ಲಿ ಸಿಂಗವಾಲ್‌ಮಂತಿ, ಮಲೆಯಾಳಂನಲ್ಲಿ ಸಿಂಘವಾಲ್‌ನ ಎಂದು ಕರೆಸಿಕೊಳ್ಳುವ ಸಿಂಗಳಿಕಗಳು ಗುಂಪು ಗುಂಪಾಗಿ ವಾಸಿಸುತ್ತವೆ. ಬಲಿಷ್ಟವಾದ ಗಂಡು ತಂಡವನ್ನು ಮುನ್ನೆಡಸುತ್ತದೆ. ಈ ಗುಂಪಿನಲ್ಲಿ ಬಹಳಷ್ಟು ಹೆಣ್ಣುಗಳು ಇರುತ್ತವೆ. ಒಂದು ಗುಂಪಿನಲ್ಲಿ ೧೦ರಿಂದ ೨೦ ಸಿಂಗಳಿಕಗಳಿರುತ್ತವೆ. ತಂಡದಿಂದ ಹೊರಗಿರುವ ಗಂಡು ಸಿಂಗಳಿಕಗಳು ಗುಂಪಿನ ನೇತೃತ್ವವನ್ನು ವಹಿಸಿಕೊಳ್ಳಲು ಕಾದಾಟವನ್ನು ನಡೆಸುತ್ತಲೇ ಇರುತ್ತವೆ.
ಸಿಂಗಳಿಕಗಳ ಸಂರಕ್ಷಣೆ
ಸಿಂಗಳಿಕಗಳ ಸಂರಕ್ಷಣೆ ವಿಶ್ವದ ಬಹಳಷ್ಟು ಮೃಗಾಲಯಗಳಲ್ಲಿ ನಡೆಯುತ್ತಿದೆ. ಕರ್ನಾಟಕದ ಮೈಸೂರು ಮೃಗಾಲಯ ಇವುಗಳ ಸಂತಾನಭಿವೃದ್ಧಿಗೆ ಜರ್ಮನಿ ಸಂಸ್ಥೆಯೊಂದಿಗೆ ಇತ್ತೀಚೆಗಷ್ಟೆ ಒಪ್ಪಂದ ಮಾಡಿಕೊಂಡಿದೆ.
ಇವುಗಳ ಅಂತಾರಾಷ್ಟ್ರೀಯ ವ್ಯಾಪಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಇವುಗಳನ್ನು ಸಂರಕ್ಷಣಾ ಪ್ರಾಣಿಗಳ ಪಟ್ಟಿಗೆ ಸೇರಿಸಿದೆ.
ಪರಿಸರವಾದಿ ಉಲ್ಲಾಸ್ ಕಾರಂತ್ ೧೯೮೩-೮೪ರಲ್ಲಿ ಈ ಸಿಂಗಳಿಕಗಳ ಕುರಿತು ಒಂದು ವಿಸ್ತೃತ ಅಧ್ಯಯನ ನಡೆಸಿದರು. ಈ ಅಧ್ಯಯನ ವರದಿ ಅವುಗಳ ಆವಾಸಸ್ಥಾನ, ನಡವಳಿಕೆ, ಸಂಖ್ಯೆ, ಸಂರಕ್ಷಣೆ, ಕೈಗೊಳ್ಳಬೇಕಾದ ಕ್ರಮ ಎಲ್ಲವನ್ನು ಒಳಗೊಂಡಿತ್ತು. ಅಲ್ಲದೇ ಕುದುರೆಮುಖ ಪ್ರದೇಶ ಸಿಂಗಳಿಕಗಳಿಗೆ ಸೂಕ್ತ ಪ್ರದೇಶ ಒಂದು ಸೂಚಿಸಲಾಗಿತ್ತು.
ಈ ವರದಿಯನ್ನು ಆದರಿಸಿ ಕೇಂದ್ರ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಇವುಗಳ ವಂಶಾಭಿವೃದ್ಧಿ ಆಶಾದಾಯಕ ಸ್ಥಿತಿಯಲ್ಲಿದೆ ಎಂದು ತಮಿಳುನಾಡಿನ ತೇಣಿ ಪ್ರದೇಶದ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಸಿಂಗಳಿಕಗಳು ಕರ್ನಾಟಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಶರಾವತಿ ವನ್ಯಜೀವಿ ಪ್ರದೇಶ, ಕೇರಳದ ಸೈಲೆಂಟ್ ವ್ಯಾಲಿರಿ ರಾಷ್ಟ್ರೀಯ ಉದ್ಯಾನ, ತಮಿಳುನಾಡಿನ ಕಾಲಕ್ಕಾಡ್ ಮತ್ತು ಅಣ್ಣಾಮಲೈ ಅಭಯಾರಣ್ಯಗಳಲ್ಲಿ ಕಾಣ ಸಿಗುತ್ತವೆ.

Monday, June 4, 2007

ಕಾಟಾಚಾರದ ವಿಶ್ವಪರಿಸರ ದಿನ ಬೇಡ

ಜೂನ್ ೫ ವಿಶ್ವ ಪರಿಸರ ದಿನ. ವಿಶ್ವದ ಎಲ್ಲೆಡೆ ಪರಿಸರದ ಕಹಳೆ. ಹಾಗೇ ಈ ಅಂಗವಾಗಿ ನಮ್ಮ ದೇಶ, ರಾಜ್ಯದಲ್ಲೂ ವಿವಿಧ ಕಾರ್ಯಕ್ರಮಗಳು.
ವಿಶ್ವ ಪರಿಸರ ದಿನಾಚರಣೆ ಈ ಒಂದು ದಿನಕ್ಕೆ ಸೀಮಿತವಾದರೆ ಸಾಕೇ? ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ. ಈ ಒಂದು ದಿನ ಭಾಷಣ ಮಾಡುವುದಕ್ಕೆ, ಸಸಿ ನೆಡುವುದಕ್ಕೆ, ಪೋಟೋಕ್ಕೊಂದು ಫೋಸ್ ನೀಡಿ ಪತ್ರಿಕೆಗಳಿಗೆ ಕಳಿಸುವುದಕ್ಕೆ ಸೀಮೀತವಾಗುವುದು ಬೇಡ.
ವಿಶ್ವ ಪರಿಸರ ದಿನವನ್ನು ಪ್ರಮುಖ ಉದ್ದೇಶವನ್ನಾಗಿಟ್ಟುಕೊಂಡು ಒಂದಿಷ್ಟು ಉತ್ತಮ ಕೆಲಸಗಳನ್ನು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ರೂಪಿಸುವಂತಾಗಬೇಕು. ಆ ಕೆಲಸಗಳು ಕೆಳ ಹಂತದ ಸಾಮಾನ್ಯ ಜನರನ್ನು ಮುಟ್ಟಬೇಕು. ಜೊತೆಗೆ ಅವರು ಅದರಲ್ಲಿ ಭಾಗಿಯಾಗುವಂತಿರಬೇಕು. ಹಾಗಾದರೇ ಮಾತ್ರ ವಿಶ್ವ ಪರಿಸರ ದಿನಾಚರಣೆಗೊಂದು ಆರ್ಥ ಬರುತ್ತದೆ.
ಪರಿಸರ ಇಂದು ಅಸಮಾತೋಲನದ ಗೂಡಾಗಿದೆ. ಎಲ್ಲೆಂದರಲ್ಲಿ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಧೂಳು, ಬಿಸಿಲು, ಅತೀವೃಷ್ಟಿ, ಅನಾವೃಷ್ಟಿಗಳದ್ದೇ ಕಾರುಬಾರಾಗಿದೆ.
ಇದ್ದುದ್ದರಲ್ಲಿಯೇ ಗ್ರಾಮೀಣ ಪ್ರದೇಶಗಳೇ ಪರವಾಗಿಲ್ಲ. ಅಲ್ಲಿ ಪರಿಸರ ನಗರ ಪ್ರದೇಶಗಳಷ್ಟು ಹಾಳಾಗಿಲ್ಲ. ದೊಡ್ಡ ದೊಡ್ಡ ನಗರಗಳು ‘ಪ್ರಾಬ್ಲಲಮ್ಸ್ ಟ್ಯಾಂಕ್’ಗಳಾಗಿವೆ. ಒಂದು ಬಗೆಹರಿದರೆ ಇನ್ನೊಂದು ಹುಟ್ಟಿಕೊಳ್ಳುವಂತಾಗಿದೆ. ಅಲ್ಲಿನ ಶಬ್ದ ಮಾಲಿನ್ಯ ಜನತೆಯ ನೆಮ್ಮದಿಯನ್ನು ಕಿತ್ತು ಹಾಕಿದೆ.
ಹೀಗಿರುವ ಹತ್ತು ಹಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಯೋಜನೆಗಳ ರೂಪುಗೊಳ್ಳಲೇಬೇಕು. ಅದು ಪರಿಸರ ಸಮತೋಲನಕ್ಕಾಗಿ...